ಶುಕ್ರವಾರ, ಫೆಬ್ರವರಿ 16, 2024

ಮಧ್ವನವಮಿ - ಮಧ್ವಾಚಾರ್ಯರು - ಮತ್ತು ದ್ವಾದಶಸ್ತೋತ್ರ



ಮಾಘ ಶುದ್ಧ ನವಮಿಯಂದು ಶ್ರೀಮದಾನಂದತೀರ್ಥ ಶ್ರೀಪಾದರು ನಮಗೆ ಕಾಣದಂತಾಗಿ

ತಾವು ಪ್ರತಿ ಕ್ಷಣ ಪೂಜಿಸುತ್ತಿದ್ದ ವೇದವ್ಯಾಸದೇವರೊಡನಿರಲು ಬದರಿಕಾಶ್ರಮಕ್ಕೆ ತೆರಳಿದರು.

ಆ ದಿನವನ್ನು ನಾವು ಮಧ್ವನವಮಿ ಎನ್ನುತ್ತೇವೆ. ನಾಳೆ ಭಾನುವಾರ ಫೆಬ್ರುವರಿ ೧೯ರಂದು

ಮಧ್ವನವಮಿ. ಕೆಳಕಾಣಿಸಿರುವುದು ಈ ಸಂಧರ್ಭದಲ್ಲಿ ಆಚಾರ್ಯರ ಹೆಸರಿನಲ್ಲಿ ಒಂದು

ಬರಹ. ಈ ಸಮಯಕ್ಕೆ ನನ್ನ ಮನದಲ್ಲಿ ಮೂಡಿದ ಆಲೋಚನೆಗಳನ್ನು ಬರೆದಿರಿಸಿದ್ದೇನೆ ಅಷ್ಟೆ. 


ತಾವು ನಮ್ಮೊಡನಿದ್ದ ಕಾಲದಲ್ಲಿ ಶ್ರೀಮದಾಚಾರ್ಯರು ರಚಿಸಿದ ೩೭ ಗ್ರಂಥಗಳು

ಸರ್ವಮೂಲ ಗ್ರಂಥಗಳೆಂದು ಹೆಸರಾಗಿ ಆಚಾರ್ಯರು ನಿರೂಪಿಸಿರುವ ತತ್ವಗಳ ಅಭ್ಯಾಸಕ್ಕೆ

ಮೂಲಸಾಮಗ್ರಿಯಾಗಿವೆ. ಅವುಗಳಲ್ಲಿ ಬ್ರಹ್ಮಸೂತ್ರ ಭಾಷ್ಯ, ಅನುವ್ಯಾಖ್ಯಾನ, ಗೀತಾ ಭಾಷ್ಯ,

ಗೀತಾ ತಾತ್ಪರ್ಯ, ಮಹಾಭಾರತ ತಾತ್ಪರ್ಯನಿರ್ಣಯ, ಸದಾಚಾರಸ್ಮೃತಿ, ತಂತ್ರಸಾರಸಂಗ್ರಹ

ಮುಂತಾದ ಕೆಲವು ಹೆಸರುಗಳ ಪರಿಚಯ ನನಗುಂಟೆ ಹೊರತು, ಯಾವುದೇ

ಒಂದುಗ್ರಂಥವನ್ನಾದರೂ ಪೂರ್ಣವಾಗಿ ವ್ಯಾಸಂಗ ಮಾಡಿ ಅದರ ಸಾರವನ್ನು ತಿಳಿದುಕೊಳ್ಳುವ

ಕಾರ್ಯ  ನನ್ನಿಂದ ಆಗಿಲ್ಲ. ಹಾಗಾಗಿ, ಆಚಾರ್ಯರ ಕೃತಿಗಳಲ್ಲಿ ನಮಗೆ ಎಟಕುವಂತಿರುವ

ಕಂದುಕಸ್ತುತಿ (ಕೃಷ್ಣ ಪದ್ಯ), ನಖ ಸ್ತುತಿ, ದ್ವಾದಶ ಸ್ತೋತ್ರ ಗಳನ್ನು  ಬಾಯಿಪಾಠ ಮಾಡಿ,

ಅವುಗಳ ಅರ್ಥ ತಿಳಿದುಕೊಂಡು, ನಿತ್ಯಪಾರಾಯಣ ಮಾಡುವ ಪ್ರಯತ್ನ ನಡೆಸಿದ್ದೇನೆ. 


ಮೇಲೆ ತಿಳಿಸಿರುವ ಪ್ರಯತ್ನದಲ್ಲಿದ್ದಾಗ, ದ್ವಾದಶಸ್ತೋತ್ರದ ಶ್ಲೋಕಗಳನ್ನು ಪದ್ಯರೂಪದಲ್ಲೇ

ಕನ್ನಡದಲ್ಲಿ ಬರೆಯಬಹುದೆನಿಸಿತು. ಅದರಂತೆ ಕೆಲವು ಅಧ್ಯಾಯಗಳನ್ನು ಕನ್ನಡಕ್ಕೆ

ಪರಿವರ್ತಿಸಿದ್ದೇನೆ. ಮೊದಲ ಅಧ್ಯಾಯವನ್ನು ಇಲ್ಲಿ ಕೆಳಗೆ ಕಾಣಿಸಿದ್ದೇನೆ. ಈ ರೀತಿಯ

ಬರವಣಿಗೆ ನನ್ನ ಮನಸ್ಸಿಗೆ ತೃಪ್ತಿ ನೀಡುವುದಲ್ಲದೆ ಈ ವಿಷಯದ ಬಗೆಗೆ ನನ್ನ ತಿಳುವಳಿಕೆ

ಎಷ್ಟಿದೆ ಎಂಬುದು ಸಹ ನನಗೆ ಮನವರಿಕೆಯಾಗುತ್ತದೆ. ಇದರಿಂದ ಮತ್ತೂ ಕೆಲವರಿಗೆ

ಏನಾದರೂ  ಉಪಯೋಗವಾದರೆ ಇನ್ನೂ ಒಳ್ಳೆಯದಾಯಿತು.  


ವಂದಿಪೆನಿವಗೆ, ವಂದನಯೋಗ್ಯ ಸದಾನಂದಗೆ, ವಸುದೇವಪುತ್ರಗೆ, ದೋಷರಹಿತನಿಗೆ 

ಇಂದಿರಾಪತಿಗೆ, ವರವನೀವ ದೇವತೆಗಳಿಗೆ ತಾ ವರವನೀವನಿಗೆ ! 


ನಮಿಪೆನಾತಗೆ ದೇವತಾ ಕಿರೀಟ ಘರ್ಷಿತ ಪೀಠ ಉಳ್ಳವಗೆ, 

ಹೃದಯಾಂಧಕಾರವ ಕರಗಿಪ ಸೂರ್ಯಪ್ರಭೆ ಆತನ ಪದಪಂಕಜಗಳಿಗೆ !  


ಬಂಗಾರ ಪೀತಾಂಬರಕಾಧಾರ ಸ್ವರ್ಣ ಸರಪಳಿಯಾವೃತ 

ಜಗದಂಬಾಲಂಕೃತ ನಡುವ ಚಿಂತಿಪುದೀಶನದು 


ಜಗವನುಂಗಿಯೂ ಕೃಶವದು ಈಶನುದರವ ಚಿಂತಿಪುದು  

ಮೂರು ರೇಖೆಗಳುದರವನು ಶ್ರೀದೇವಿಯಾಲಂಗಿಸಿಹಳು ನಿತ್ಯ  


ಸ್ಮರಣೆಗೆ ತಕ್ಕುದದು ಇಂದಿರೆಯಾವಾಸಸ್ಥಾನ, ವಿಷ್ಣುವಿನ

ಸೀಮೆಯಿಲ್ಲದ ವಕ್ಷ  ಸೀಮಿತವಾದುದಾತನದೇ ಭುಜಗಳಿಂದ!


ಶಂಖ ಚಕ್ರ ಗದಾ ಪದ್ಮಾಲಂಕೃತ ಹರಿಯ ಭುಜವ ಚಿಂತಿಪುದು ಸತತ  

ವೃತ್ತ, ಸಪುಷ್ಟವವು, ಜಗದ್ರಕ್ಷಣಾ ಕಾರ್ಯಕೆಂದೇ ಇಹವು !


ಸ್ಮರಿಸು ಸದಾ, ಹೊಳೆಯುವ ಕೌಸ್ತುಭಕ್ಕೇ ಹೊಳಪನೀವುದನು 

ಅಖಿಳವೇದಗಳು ಸತತ ಹೊರಮ್ಮುವ ವೈಕುಂಠ ನಾಮನ ಕಂಠವನು !


ಸಹಸ್ರ ಚಂದ್ರಕಾಂತಿಯುಕ್ತ  ಶ್ರೀಪತಿಯ ಮುಖಕಮಲವ ಸ್ಮರಿಸು  

ಶ್ಲಾಘನೆಗೆ ಯೋಗ್ಯವದು ಭವತಾಪವನಪಹರಿಪುದದು


ಅನ್ಯರಿಗೆಟುಕದ ಪೂರ್ಣಾನಂದಸೂಸುವ ಗೋವಿಂದನ 

ಮೋಕ್ಷಪ್ರದ ಮಂದಹಾಸದಲಿರಲಿ ಸದಾಧ್ಯಾನ

    

ಭವ ತಾಪತ್ರಯ ವಿನಾಶಕ ಶ್ರೀರಾಮನ ಪ್ರೀತಿಯುಕ್ತ ನೋಟ 

ಪೂರ್ಣಾನಂದ ಭರಿತ ಅಮೃತಸಾಗರವು, ಎನ್ನ ಸ್ಮರಣೆಯಲ್ಲಿರಲಿ ಸದಾ 


ಬ್ರಹ್ಮಾದಿ ದೇವತೆಗಳ ಪದದಾತ, ಮುಕ್ತಿದಾತ, ಬ್ರಹ್ಮಾದಿವಂದಿತ  

ಈಶನ ಹುಬ್ಬಿನ ವಿಲಾಸ ನೆನಪಿರಲಿ ಅನವರತ 


ಅನಾದಿಕಾಲದಿಂದ ಬ್ರಹ್ಮಾದಿಗಳು ಅನವರತ ಸ್ತುತಿಸುತ್ತಲೂ 

ಪೂರ್ಣವಾಗದೀತನ ಗುಣಗಾನ. ಅಂಥ ಅನಂತನ ಚಿಂತೆ 

ನಮ್ಮಂತರಂಗದೊಳಿರಲಿ ಸದಾ, ಅಂತ್ಯಕಾಲದೊಳಂತು ಅತ್ಯವಶ್ಯ  


ತಮ್ಮ ಕಣ್ಣಿಗೆ ಕಂಡದ್ದೆಲ್ಲದರಲ್ಲೂ ಪರಮಾತ್ಮನ ರೂಪವನ್ನೆ ಕಂಡು, ಕಿವಿಗೆ ಬಿದ್ದ ಶಬ್ದಗಳೆಲ್ಲದರಲ್ಲೂ

ಪರಮಾತ್ಮನ ನಾಮ ಕೇಳುತ್ತ, ಪ್ರಣವೋಪಾಸನೆಯ ಮೂಲಕ ಸದಾ ಪರಮಾತ್ಮನ

ಪೂಜಿಸುತ್ತಿರುವ ಆಚಾರ್ಯರಿಗೆ ಇತರ ಸ್ತೋತ್ರಗಳ ಮೂಲಕ ಶ್ರೀಹರಿಯನ್ನು ಸ್ತುತಿಸುವ

ಅಗತ್ಯವಿಲ್ಲ. ಶ್ರೀ ರಾಘವೇಂದ್ರಸ್ವಾಮಿಗಳು ಪ್ರಾತಃಸಂಕಲ್ಪ ಗದ್ಯದಲ್ಲಿ ತಿಳಿಸಿರುವಂತೆ ಸರ್ವತ್ರ,

ಸರ್ವದಾ, ಸರ್ವಾಕಾರ, ಸರ್ವಾಧಾರ, ಎಂದು ಮೊದಲ್ಗೊಂಡು, ಸರ್ವತ್ಯಂತವಿಲಕ್ಷಣ,

ಸ್ವಗತಭೇದವಿವರ್ಜಿತ ಮುಂತಾಗಿ ಅನೇಕ ಗುಣವಿಶೇಷಣಗಳನ್ನು ಮುಖ್ಯಪ್ರಾಣರು

ಭಗವಂತನಲ್ಲಿ  ಕಂಡು, ಸದಾ ಭಗವಂತನ ಆರಾಧನೆಯಲ್ಲಿ ತೊಡಗಿರುತ್ತಾರೆ. ರಾಯರೇ

ಮತ್ತೆ ಹೇಳುವಂತೆ, “ಸದಾ ಭಗವತ್ಪರಾಣಾಮ್, ಭಗವದನ್ಯತ್ರ ಸರ್ವ ವಸ್ತುಷು ಮನಸ್ಸಂಗ

ರಹಿತಾನಾಮ್” (ಸದಾ ಭಗವಂತನಲ್ಲೇ ತೊಡಗಿರುವವರು, ಭಗವಂತನನ್ನುಳಿದು

ಮತ್ಯಾವ ವಿಷಯದಲ್ಲೂ ಆಸಕ್ತಿಯಿಲ್ಲದಿರುವವರು).  ಆ ರೀತಿಯ ಆರಾಧನೆಯನ್ನು

ಊಹಿಸಲೂ ಸಾಧ್ಯವಿಲ್ಲದ ನಮ್ಮಂಥವರಿಗೆ ಶ್ರೀಹರಿಯಲ್ಲಿ ಮನವನಿರಿಸಲು ಒಂದು

ಪ್ರತಿಕೃತಿಯ ಅಗತ್ಯಕಂಡ  ಆಚಾರ್ಯರು ದ್ವಾದಶ ಸ್ತೋತ್ರದಲ್ಲಿ ಶ್ರೀಹರಿಯ ಚಿತ್ರವನ್ನು

ನಮಗೆ ಕಾಣಿಸಿದ್ದಾರೆ. 


ವಂದೇವಂದ್ಯಂ ಸದಾನಂದಂ ಎಂದು ಪ್ರಾರಂಭವಾಗುವ ಮೊದಲ ಅಧ್ಯಾಯದಲ್ಲಿ

ಆಚಾರ್ಯರು ಶ್ರೀಹರಿಯನ್ನು  ಪಾದದಿಂದ ಮುಖದವರೆಗೆ ವರ್ಣಿಸಿ ಸ್ತುತಿಸುತ್ತಾ ಮನದಲ್ಲಿ

ಸದಾ ಶ್ರೀಹರಿಯ ಚಿಂತನೆಯಿರಲಿ, ವಿಶೇಷವಾಗಿ ಅಂತ್ಯಕಾಲದಲ್ಲಿ ಶ್ರೀಹರಿಯ

ಧ್ಯಾನವಿರಲೆಂದು ಸೂಚಿಸುತ್ತಾರೆ.  ಸದಾ ಮನದಲ್ಲಿ ಶ್ರೀಹರಿಯ ಚಿಂತನೆಯಿದ್ದರೆ,

ಅಂತ್ಯಕಾಲದಲ್ಲೂ ಮನದಲ್ಲಿ ಆ ಚಿಂತನೆ ಸಾಧ್ಯವಾಗಬಹುದೇನೋ ಎಂಬುದು ಇಲ್ಲಿರುವ

ಭಾವನೆ. 


‘ನಿಜಪೂರ್ಣಸುಖಾಮಿತಬೋಧತನು’, ‘ವಿಗ್ರಹೋ ಯಸ್ಯ ಸರ್ವೇಗುಣಾ ಏವಹಿ’,

‘ಪುಷ್ಟಷಾಡ್ಗುಣ್ಯಸದ್ವಿಗ್ರಹ’, ‘ಅಪರಿಮಿತಸುಖನಿಧಿವಿಮಲಸುದೇಹ’  ಮುಂತಾದ ಪದಗಳ

ಮೂಲಕ ಪರಮಾತ್ಮನ ದೇಹವೆನ್ನುವುದು ಒಂದು ನಿರ್ಮಲಗುಣಜ್ಞಾನಾನಂದ ರೂಪ ಮಾತ್ರ

ಎಂದು ವಿಶದಪಡಿಸಿರುವ ಆಚಾರ್ಯರು, ನಮ್ಮ ಅನುಕೂಲಕ್ಕೆಂದು ಪರಮಾತ್ಮನ ಪಾದ,

ಕಟಿ, ಎದೆ, ಭುಜ, ಕತ್ತು, ಕಣ್ಣು ಮುಂತಾಗಿ ಅಂಗಗಳ ವರ್ಣನೆಯನ್ನು ಮಾಡಿದ್ದಾರೆ. ಆದರೆ 

ಆ ರೀತಿಯಾಗಿ ಪರಮಾತ್ಮನ ಅಂಗಯುಕ್ತವಾದ ದೇಹವನ್ನು ಕಲ್ಪಿಸಿಕೊಂಡು ಪೂಜಿಸುವಾಗ

ಸಹ ಪರಮಾತ್ಮನ ನಿಜಸ್ವರೂಪದ ಅರಿವು ನಮಗಿರಬೇಕೆಂದು ಮೇಲ್ಕಾಣಿಸಿರುವ

ವಿಶೇಷಣಗಳ ಮೂಲಕ ಸೂಚಿಸಿದ್ದಾರೆ. 


ಸಕಲ ಜಡ, ಜೀವಗಳಲ್ಲಿ ಪರಮಾತ್ಮನನ್ನು ಕಾಣು, ಸಕಲ ಶಬ್ದಗಳಲ್ಲಿ ಭಗವಂತನ

ನಾಮವ ಕೇಳು, (“ಲೌಕಿಕ ವೈದಿಕ ಬೇಧ ಭಿನ್ನ ವರ್ಣಾತ್ಮಕ ಧ್ವನ್ಯಾತ್ಮಕ”  - ಮುಂತಾದ 

ಅಶೇಷ ಶಬ್ದಗಳೆಲ್ಲವೂ ಭಗವಂತನನ್ನೇ ಸೂಚಿಸುತ್ತವೆ ಎನ್ನುತ್ತಾರೆ ರಾಯರು.) ಮಾಡುವ

ಕರ್ಮಗಳೆಲ್ಲ ಶ್ರೀ ಹರಿಯ ಪೂಜೆಯಾಗಲಿ - ಇದು ನಾವು ಭಗವಂತನನ್ನು ಆರಾಧಿಸಬೇಕಾದ

ರೀತಿ. ರಾಯರು, ಆಚಾರ್ಯರು ಮತ್ತು ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣಪರಮಾತ್ಮ ಸಹ

ಸೂಚಿಸಿರುವ ರೀತಿ ಇದು. 


ಈ ಚಿಂತನೆಯನ್ನು ನಾಲ್ಕೇ ಸಾಲುಗಳಲ್ಲಿ ವಿಜಯದಾಸರು ಸುಂದರವಾಗಿ ತಿಳಿಸಿದ್ದಾರೆ.. 


ಕಂಡ ಕಂಡದ್ದೆಲ್ಲ ಪದುಮನಾಭನ ಮೂರ್ತಿ 

ಉಂಡು ಉಟ್ಟಿದ್ದೆಲ್ಲ ವಿಷ್ಣುಪೂಜೆ 

ತಂಡ ತಂಡದವಾರ್ತೆ ವಾರಿಜಾಕ್ಷನ ಕೀರ್ತಿ 

ಹಿಂಡು ಹಿಂಡಿನ ಮಾತು ಹರಿಯನಾಮ 


ಆಚಾರ್ಯರ ಸ್ತೋತ್ರಗಳ ಅಭ್ಯಾಸ, ಪಠನೆ, ತತ್ವಗಳ ಚಿಂತನೆಯ ಮೂಲಕ ನಾವು ಕೂಡ

ದಾಸರು ಸೂಚಿಸುತ್ತಿರುವ  ಮಟ್ಟವನ್ನು  ತಲುಪವುದಾಗಲೆಂದು ಬೇಡಿಕೊಳ್ಳುತ್ತಾ, ಶ್ರೀಹರಿಯ, ಶ್ರೀಮದಾನಂದತೀರ್ಥರ, ಪಾದಪದ್ಮಗಳಿಗೆ ಈ ಕೆಲವು ಸಾಲುಗಳ ಬರಹದ ಮೂಲಕ ನನ್ನ

ನಮನ. 

“ಶ್ರೀಮದಾನಂದ ತೀರ್ಥ ತ್ರೈಲೋಕಾಚಾರ್ಯ ಪಾದೋಜ್ವಲ ಜಲಜ ಲಸತ್ ಪಾಂಸವೋಸ್ಮಾನ್ ಪುನಂತು”

( ತ್ರಿಲೋಕ ಗುರು ಶ್ರೀಮದಾನಂದ ತೀರ್ಥರ ಪಾದಧೂಳಿಯ ಕಣಗಳು ನಮ್ಮನ್ನು ರಕ್ಷಿಸಲಿ)



ಶುಕ್ರವಾರ, ಫೆಬ್ರವರಿ 9, 2024

ಏಕಸ್ತನಿ ದೇವಿ

While I was wandering around the streets

of Kumata City during my morning walk recently,

I came across a mini temple structure on a

platform around a tree (What we usually call

an ‘AraLikaTTe’). Such structures are usually

built in the honour of a lesser known deity or

a supernatural being. The board in front of the

structure said ‘Naaga Mahaasati’ and

‘eka stani devi’.  I could guess what naaga

mahaasati was, but I was intrigued by ‘eka

stani devi’ - the deity with a single breast. 

I am sure that there will be some legend

behind the name but probably there would

be no one now, who would know the story.  

I used my imagination and built a story

around the ‘eka stani devi’. 

The story and the names are entirely my

imagination. So, please read it as pure fiction. 



ಈಗ ನಾವು ಕುಮಟಾ ಎಂದು ಕರೆಯುವ ಊರಿಗೆ ಹಿಂದೆ

ಕಮ್ಮತಗೇರಿ ಎಂದು ಹೆಸರಿದ್ದಿತಂತೆ. ಕಮ್ಮತ ಎಂದರೆ ಕೃಷಿಯಲ್ಲಿ

ನಿರತರಾದವರು ಎಂದು ಅರ್ಥ. ಕರಾವಳಿಯಲ್ಲಿ ಬಹುತೇಕವಾಗಿ 

ಮೀನುಗಾರಿಕೆಗೆ ಪ್ರಾಧಾನ್ಯ. ಆದರೆ ಕಮ್ಮತಗೇರಿಯ ಜನ

ಕೃಷಿಯಲ್ಲಿ ನಿರತರಾದವರು. ಮೈಮುರಿದು ದುಡಿದು ಬೆಳೆತೆಗೆದು,

ಜತೆಗೆ ದನ ಕರುಗಳನ್ನು ಸಾಕಿಕೊಂಡು ಬಾಳುತ್ತಿದ್ದವರು.

ಸಮೃದ್ಧಿಯಾಗಿ ಧಾನ್ಯ, ಹಾಲು, ಹೈನುಗಳಿದ್ದವರು.

ಅದರಿಂದಲೋ ಏನೋ ಕೊಡುಗೈಯವರೆಂದು ಹೆಸರಾದವರು.

ಊರಿನವರ ಧಾರಾಳತನದಿಂದ ಮತ್ತು  ಬಳಕೆಗೆ ಅನುಕೂಲವಾಗಿ

ಸಿಗುತ್ತಿದ್ದ ಅಘನಾಶಿನಿ ನದಿಯ ನೀರಿನ ಪ್ರಭಾವದಿಂದ,

ಊರಿಂದೂರಿಗೆ ಅಲೆದು ಜೀವಿಸುತ್ತಿದ್ದ ಅಲೆಮಾರಿಜನಾಂಗದ

ಅನೇಕರು, (‘ಜಿಪ್ಸಿ’ಗಳು), ವರ್ಷದಲ್ಲಿ ಹಲವಾರು ತಿಂಗಳುಗಳ

ಕಾಲ ಕಮ್ಮತಗೇರಿಯಲ್ಲೇ ಬೀಡು ಬಿಡುತ್ತಿದ್ದರಂತೆ. ಹಾಗೆ ಈ

ಬೀಡಿನಲ್ಲಿ ಬೀಡುಬಿಟ್ಟವರಲ್ಲಿ ಸಾಧುಗಳು, ಸಂತರೂ ಇರುತ್ತಿದ್ದರೆಂದು

ಹೇಳಬೇಕಾದ್ದೇ ಇಲ್ಲ. 


ವರುಷಕ್ಕೊಮ್ಮೆ ಈ ಊರಿಗೆ ಬರುತ್ತಿದ್ದ ಅನೇಕರಲ್ಲಿ ಒಬ್ಬಳು ಗಂಗಾವಳಿಯ

ತುಂಗಾ. ಈಕೆ ಒಬ್ಬ ಸಾಧ್ವಿಯೋ ಸನ್ಯಾಸಿನಿಯೋ ಇದ್ದಿರಬಹುದೆನ್ನುತ್ತಾರೆ. ತೇಜಪೂರ್ಣವಾಗಿ ಕಂಗೊಳಿಸುವ ಮುಖ, ಹೊಳೆವ ಕಣ್ಣುಗಳುಳ್ಳವಳು. ಆಕೆ ಎಲ್ಲಿಯವಳೋ ಯಾರಿಗೂ ಸರಿಯಾಗಿ ತಿಳಿಯದು. ಗಂಗಾವಳಿಯವಳೆಂದು

ಯಾರೋ ಅಂದಿದ್ದರು ಅಷ್ಟೇ. ಅವಳ ತಂದೆ, ತಾಯಿ, ಹಿಂದು,

ಮುಂದು ಮತ್ತೇನೂ ಯಾರಿಗೂ ತಿಳಿಯದು. ಆಕೆಯ ಹೆಸರೇನೆಂದು

ಸಹ ಯಾರಿಗೂ ತಿಳಿಯದು. ನಾನು ನನ್ನ ಕಥೆಯ ಅನುಕೂಲಕ್ಕೆಂದು

ಆಕೆಯನ್ನು ಗಂಗಾವಳಿಯ ತುಂಗೆ ಅಂದೆನಷ್ಟೆ.        


ಅವಳ ದಿರಿಸೂ ಕೊಂಚ ವಿಚಿತ್ರವೇ. ಕುಪ್ಪಸವಿಲ್ಲದೆ, ಮೈಮುಚ್ಚುವಂತೆ

ಕಾವಿ ಸೀರೆಯುಟ್ಟು, ಜಟೆಯಂತೆ ತುರುಬುಕಟ್ಟುತ್ತಿದ್ದಳು. ಒಳ್ಳೆ

ಹೂ ಸಿಕ್ಕಿದರೆ  ಆ ಜಟೆಗೆ ಒಂದು ಹೂವು ಸಿಕ್ಕಿಕೊಂಡಿರುತ್ತಿತ್ತು.

ಅದಲ್ಲದೆ ಮೈಮೇಲೆ ಸರ ಬಳೆಗಳಾಗಲೀ, ಹಣೆಗೆ ಕುಂಕುಮವಾಗಲೀ

ಮತ್ತೇನೇನೂ ಇಲ್ಲ.  ಹೀಗೆ ಒಂಟಿ ಹೆಂಗಸು ಸನ್ಯಾಸಿಗಳಂತೆ

ಅಲೆದಾಡುವುದು, ಬೇಕಾದಂತೆ ಬರುವುದು, ಹೋಗುವುದು,

ಕೆಲವರಿಗೆ ಸರಿದೋರುತ್ತಿರಲಿಲ್ಲ. ಆದರೆ ಆಕೆ ಯಾರೇನೆನ್ನುತ್ತಾರೆಂದು

ಲೆಕ್ಕಿಸುತ್ತಿರಲಿಲ್ಲ. ಅವಳ ರೀತಿನೀತಿಗಳೇ ಯಾರಿಗೂ

ತಿಳಿಯುತ್ತಿರಲಿಲ್ಲ. ಅವಳಿಗೆ ಯಾರೊಡನೆಯೂ ಅತಿ ಒಡನಾಟವಿಲ್ಲ.

ಆದರೆ ಅವಳೊಡನೆ ಮಾತುಕತೆಯಾಡಿದ ಎಲ್ಲರಿಗೂ ಅದೇನೋ

ಮನಸ್ಸಮಾಧಾನ, ಸಂತೋಷ ಸಿಗುತ್ತಿತ್ತಂತೆ. 



ಈಕೆ ಬಂದಾಗ ಊರಿನ ಪಕ್ಕದಲ್ಲೇ ಹರಿಯುವ ಅಘನಾಶಿನಿ

ನದಿಯ ಬಳಿಯಲ್ಲಿನ ಮಂಟಪವೊಂದರಲ್ಲಿ ವಾಸವಿರುವಳು.

ಆಕೆ ಇರುತ್ತಿದ್ದಷ್ಟು ದಿನ ಮಂಟಪ ಮತ್ತು ಸುತ್ತಮುತ್ತದ

ಜಾಗ ತೊಳೆದಂತೆ ಸ್ವಚ್ಛವಾಗಿರುತ್ತಿತ್ತು. ಬಂದಾಗಲೆಲ್ಲಾ

ಯಾವುದಾದರೂ ಒಂದೆರಡು ಹೂವಿನದೋ, ಹಣ್ಣಿನದೋ

ಸಸಿ ಹಚ್ಚಿ ಬೆಳೆಸಿರುತ್ತಿದ್ದಳು. ಹಿಂದೆ ಅವಳು ನೆಟ್ಟಿದ್ದ ಸೀಬೆ,

ಮಾವು, ಮರವಾಗಿ  ಹಣ್ಣು ಬಿಡುತ್ತಿತ್ತು. ಮಂಟಪಕ್ಕೆ ನೆರಳಾಗಿತ್ತು.

ಸಾಮಾನ್ಯವಾಗಿ ಈಕೆ ಇರುತ್ತಿದ್ದದ್ದು ಒಂದೆರಡು ತಿಂಗಳುಗಳ

ಕಾಲ. ದಿನದ ಬಹುಕಾಲ ಏನೋ ಧ್ಯಾನದಲ್ಲಿದ್ದಂತೆ ಇರುವಳು.

ಯಾರಾದರೂ ಬಂದರೆ ಮಂದಹಾಸದಿಂದ ಮಾತನಾಡಿಸುವಳು.

ಕೊಟ್ಟದ್ದನ್ನು ಸ್ವೀಕರಿಸುವಳು. ಏನನ್ನೂ ಬೇಡುತ್ತಿರಲಿಲ್ಲ.

ಒಂದು ದಿನ ಇದ್ದಕ್ಕಿದ್ದಂತೆ ಆಕೆ ಮುಂದೆ ಹೊರಟುಬಿಡುವಳು.

ಎಲ್ಲಿಗೆಂದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಯಾರೇನು ಮಾಡಿದರೂ,

ಕೇಳಿಕೊಂಡರೂ ಆಕೆ ನಿಲ್ಲುತ್ತಿರಲಿಲ್ಲ. ತಾನು ಒಂದುಕಡೆ ಹೆಚ್ಚುಕಾಲ

ನಿಲ್ಲುವುದು ತಾನು ಅನುಸರಿಸುವ ಧರ್ಮಕ್ಕೆ ಸಲ್ಲದೆಂದು

ಹೇಳುತ್ತಿದ್ದಳು. ಆ ಧರ್ಮ ಯಾವುದೆಂದು ಸಹ ಯಾರಿಗೂ ತಿಳಿಯದು. 


ಆಕೆಯದು ಮತ್ತೊಂದು ವಿಶೇಷವಿತ್ತು. ತಾನು ಕಮ್ಮತಗೇರಿಯಲ್ಲಿದ್ದಾಗ

ಅಲ್ಲಿ ಜನ್ಮತಾಳಿದ ಯಾವುದೇ ಕೂಸಿನ ತಾಯಿ ತೀರಿಕೊಂಡರೆ,

ಅಥವಾ ತಾಯಿಗೆ ಮೊಲೆಹಾಲು ಬರದಾದರೆ, ಕಡಿಮೆಯಾದರೆ

ತುಂಗೆ ಆಕೆಯ ಮಗುವಿಗೆ ತಾನು ಹಾಲೂಡಿಸುವಳು. ತನಗೆ

ಮಕ್ಕಳಿಲ್ಲದಿದ್ದರೂ ಆಕೆಯ ಸ್ತನಗಳಲ್ಲಿ ಬೇಕಾದಾಗ ಬೇಕಾದಂತೆ

ಹಾಲಿನ ಹೊಳೆ ಹರಿಯುತ್ತಿದ್ದಿತಂತೆ. ಸಿಡುಬು, ಪ್ಲೇಗು ಮುಂತಾದ

ಕಾಯಿಲೆಗಳಿಂದ ಜನ ಒಟ್ಟಿಗೇ ಸಾಯುತ್ತಿದ್ದ ಆ ಕಾಲದಲ್ಲಿ ಆಕೆ

ಒಮ್ಮೊಮ್ಮೆ ಒಮ್ಮೆಗೇ ಮೂರು ನಾಕು ಮಕ್ಕಳಿಗೆ ಹಾಲೂಡಿಸಿದ್ದೂ

ಉಂಟು.  ಅಷ್ಟೇ ಅಲ್ಲ. ಕರು ಜನಿಸಿದ ನಂತರದಲ್ಲಿ ತಾಯಿ ಹಸು

ತೀರಿಕೊಂಡ ಒಂದೆರಡು ಸಂಧರ್ಭದಲ್ಲಿ ಆಕೆ ಕರುವಿಗೆ

ಹಾಲೂಡಿಸಿದಳೆಂಬ ಪ್ರತೀತಿಯೂ ಇತ್ತು. ಆದರೆ ಅದನ್ನು

ಪ್ರತ್ಯಕ್ಷವಾಗಿ ಕಂಡವರಿಲ್ಲ. 


ತಾನು ಹಾಲೂಡಿಸುತ್ತಿದ್ದ ಮಗುವಿಗೆ ತನ್ನ ಹಾಲಿಲ್ಲದೆ ನಡೆಯದೆಂದು

ಆಕೆಗೆ ನಂಬಿಕೆಯಾದರೆ ಆಕೆ ಒಂದೆರಡು ತಿಂಗಳ ಹೆಚ್ಚು ಕಾಲ ಆ

ಊರಿನಲ್ಲೇ ಬಿಡಾರ ಹೂಡಿ ಮಗು ಬೇರೆ ಆಹಾರಕ್ಕೆ ಹೊಂದಿಕೊಂಡ

ನಂತರ ಮುಂದೆ ನಡೆಯುವಳು. ಹಾಗೆ ಅವಳ ಮೊಲೆಹಾಲು

ಕುಡಿದ ಕೂಸುಗಳು ಸ್ವಂತ ತಾಯಿಯ ಹಾಲುಕುಡಿದ ಮಕ್ಕಳಿಗಿಂತ

ದಷ್ಟ ಪುಷ್ಟವಾಗಿ, ಧೃಡವಾಗಿ ಬೆಳೆಯುತ್ತವೆಂದು ಜನ ಅನ್ನುತ್ತಿದ್ದರು. 


ಹೀಗೆ ತಾಯಿ ಇಲ್ಲದೆ ತುಂಗೆಯ ಮೊಲೆಹಾಲು ಕುಡಿಯುತ್ತಿದ್ದ 

ಕೂಸುಗಳಲ್ಲಿ ಒಂದು ಸಿಂಗಾನಾಯಕನ ಕೂಸು. ಆದರೆ ವಿಚಿತ್ರವೆಂದರೆ

ಆ ಮಗು ಈಕೆಯ ಮೊಲೆಹಾಲು ಉಳಿದು ಮತ್ತೇನನ್ನೂ ಮುಟ್ಟಲೇ ಇಲ್ಲ.

ಆ ಕೂಸಿಗೆಂದು ತುಂಗೆ ಮೂರುತಿಂಗಳಕಾಲ ಕಮ್ಮತಗೇರಿಯಲ್ಲೇ

ಉಳಿದು ಪ್ರಯತ್ನ ಪಟ್ಟರೂ ಆ ಮಗು ಹಸುವಿನ ಹಾಲನ್ನಾಗಲೀ,

ಮೇಕೆಹಾಲನ್ನಾಗಲೀ  ಅಥವಾ ಕೂಸಿಗೆ ಮೊಲೆಯೂಡಿಸಲು ಒಪ್ಪಿದ

ಇತರ ತಾಯಿಯರ ಹಾಲನ್ನಾಗಲೀ ಮುಟ್ಟಲೇ ಒಲ್ಲದು. 


ಮೂರು ತಿಂಗಳು ಕಳೆದಂತೆ ತುಂಗೆಗೆ ಮುಂದೆ ಹೊರಡುವ ತವಕ. 

ತನ್ನ ಹಾಲಿನ ಸರಬರಾಜು ಪೂರ್ಣವಾಗಿ ನಿಂತರೆ ಮಗು ಬೇರೆ

ಆಹಾರಕ್ಕೆ ಹೊಂದಿಕೊಂಡೀತೆಂದುಕೊಂಡು ಆಕೆ ಹಾಲು

ಕೊಡುವುದನಿಲ್ಲಿಸಿ ಮಗುವನ್ನು ಉಪವಾಸವಿಟ್ಟರೂ ಸಹ ಅದು

ಅತ್ತು ಅತ್ತು ಸೋತು ಸಾಯುವಂತಾಯಿತೇ ವಿನಃ ಬೇರೆ ಆಹಾರ

ಮುಟ್ಟಲಿಲ್ಲ. 


ತುಂಗೆಗೆ ಈ ಕೂಸೊಂದು ಧರ್ಮಸಂಕಟವಾಯಿತು. ತಾನು ಮಗುವನ್ನು

ಬಿಟ್ಟು ಮುಂದೆ ಹೋಗುವಂತಿಲ್ಲ, ಕಮ್ಮತಗೇರಿಯಲ್ಲಿಯೇ

ಉಳಿಯುವಂತೆಯೂ ಇಲ್ಲ.  ಹಾಗೇ ಮತ್ತೊಂದು ತಿಂಗಳು ಕಳೆದನಂತರ

ತುಂಗೆ ಮುಂದೆ ಹೋಗುವುದು ಆಕೆಗೆ ಅನಿವಾರ್ಯವಾಯ್ತು.

ಮಗುವಿನ ಆರೈಕೆಯನ್ನು ಜಗವನ್ನೆಲ್ಲಾ ಸಂಭಾಳಿಸುವ ಜಗದೀಶನಿಗೊಪ್ಪಿಸಿ

ತಾನು ಹೊರಡುವುದಾಗಿ ಆಕೆ ನಿರ್ಧರಿಸಿದಳು. ವಿಷಯ ತಿಳಿದ

ಸಿಂಗಾನಾಯಕ ತನ್ನ ಮಗುವಿಗೆ ಜೀವದಾನ ಮಾಡಬೇಕೆಂದು

ಆಕೆಯ ಕಾಲುಹಿಡಿದವ ಕಾಲು ಬಿಡಲೇ ಇಲ್ಲ. ಸರಿ, ತಾನು

ಏನಾದರೂ ಮಾಡಿ ಮಗುವಿನ ಜೀವ ಉಳಿಸುವುದಾಗಿ ಭರವಸೆ ನೀಡಿ,

ಮಗುವನ್ನು ಒಂದೆರಡು ದಿನ ತನ್ನೊಡನೆಯೇ ಬಿಟ್ಟುಬಿಡುವಂತೆ

ತುಂಗೆ ಸೂಚಿಸಿದಳು. 


ಸಿಂಗಾನಾಯಕ ಪ್ರತಿಮುಂಜಾನೆ ಮಂಟಪಕ್ಕೆ ಬಂದು ಮಗುವನ್ನು

ನೋಡಿಕೊಂಡು ನಂತರ ತನ್ನ ಕೆಲಸಕ್ಕೆ ಹೋಗುತ್ತಿದ್ದ. ಎರಡು

ಮೂರು ದಿನ ಕಳೆಯಿತು. ನಾಲ್ಕನೆಯ ಮುಂಜಾನೆ ಸಿಂಗಾನಾಯಕ

ಬಂದು ನೋಡುವಾಗ ನದಿಯ ಬಳಿಯ ಮಂಟಪ ಖಾಲಿ !

ಕಳವಳದಿಂದ ಸುತ್ತ ಮುತ್ತೆಲ್ಲಾ ಹುಡುಕಿದ. ತುಂಗೆಯೂ ಇಲ್ಲ,

ಮಗುವೂ ಇಲ್ಲ. ನಾಯಕನಿಗೆ ಜೀವವೇ ಹಾರಿಹೋದಂತಾಯಿತು.

ಮಗುವನ್ನೆತ್ತಿಕೊಂಡು ನಡೆದುಬಿಟ್ಟಳೇ ತುಂಗೆ ?  ಕೆಲವೇಕ್ಷಣಗಳಲ್ಲಿ 

ಊರಿನಜನವೆಲ್ಲ ಮಂಟಪದ ಬಳಿ ಜಮಾಯಿಸಿತು. ಹೌಹಾರಿದ

ಜನ ಏನಾಯಿತೆಂದು ತಿಳಿಯದೆ ಊಹಾಪೋಹಗಳ ಮಾತುಕತೆ

ನಡೆಸಿದ್ದಾಗ, ಪರವೂರಿನಿಂದ ವಾಪಸು ಬರುತ್ತಿದ್ದ ಶೀನ ಪರ್ಬು

ಬಂದು ಗುಂಪಿಗೆ ಸೇರಿದ. 


ವಿಷಯ ತಿಳಿದ ಶೀನಪ್ಪ, ತಾನು ಬರುತ್ತಿದ್ದಾಗ ಹಾದಿಯಲ್ಲಿ

ನಾಗಮಹಾಸತಿಯ ಕಟ್ಟೆಯ ಬಳಿ ಒಂದು ಮಗುವಿನ ಕೇಕೆ

ಕೇಳಿದಂತಾಯಿತೆಂದೂ ಆದರೆ ತಾನು ಸತಿಯ ಸ್ಥಳದಲ್ಲಿ ಆ

ಮಗುವಿನ ಕೇಕೆಯ ಶಬ್ದ ಕೇಳಿ ಹೆದರಿ ಅಕ್ಕ ಪಕ್ಕ ನೋಡದೆ

ದೌಡಾಯಿಸಿ ಬಂದೆನೆಂದೂ ತಿಳಿಸಿದ. ಜನರ ಗುಂಪು

ನಾಗಮಹಾಸತಿಯ ಕಟ್ಟೆಯಬಳಿಗೋಡಿತು. ನಾಗಮಹಾಸತಿಯ

ಕಟ್ಟೆಯಬಳಿ ಅವರು ಕಂಡ ದೃಶ್ಯ ಎಲ್ಲರನ್ನೂ  ದಿಗ್ಭ್ರಾಂತರನ್ನಾಗಿಸಿತು.  


ಕಟ್ಟೆಯ ಬದಿಯಲ್ಲಿ ತುಂಗೆಯ ಪೂರ್ಣಾಕಾರದ ಮಣ್ಣಿನ ಪ್ರತಿಕೃತಿ

ಮಲಗಿದೆ. ಮೇಲ್ಭಾಗ ನಗ್ನವಾಗಿದ ಮೂರ್ತಿಯ ಒಂದು ಸ್ತನ

ಮಣ್ಣಿನದಾದರೆ ಮತ್ತೊಂದು ನಿಜವಾದ ಮಾನವ ಸ್ತನವಿದೆ !! 

ಸ್ತನದಿಂದ ಒಸರುವ ಹಾಲುಕುಡಿಯುತ್ತ ಕೇಕೆಹಾಕುತ್ತಾ ಪಕ್ಕದಲ್ಲೇ

ಸಿಂಗಾನಾಯಕನ ಮಗು ಮಲಗಿದೆ ! 



ಒಂದು ವರುಷದಕಾಲವೂ ಮಗು ಬೆಳೆದು ತಾನಾಗಿ ಇತರ ಆಹಾರಕ್ಕೆ

ಒಗ್ಗಿಕೊಳ್ಳುವರೆಗೂ ಮಗುವಿಗೆ ಬೇಕಾದಾಗಲೆಲ್ಲಾ ಆ ಸ್ತನದಿಂದ

ಹಾಲು ಒಸರುತ್ತಲೇ ಇದ್ದಿತಂತೆ. ಮಗು ಅದನ್ನು ಕುಡಿದೇ ಬೆಳೆದು

ಬೇರೆ ಆಹಾರ ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಹಾಲು

ಒಸರುವುದು ತಾನೇ ತಾನಾಗಿ ನಿಂತು ಹೋಯಿತಂತೆ ! ಎಲ್ಲೆಲ್ಲಿ ಹುಡುಕಿ

ಏನೇನು ಪ್ರಯತ್ನ ಪಟ್ಟರೂ ತುಂಗಾತಾಯಿಯನ್ನು ಕಮ್ಮತಗೇರಿಯ

ಜನ ಮತ್ತೆ ಕಾಣಲೇ ಇಲ್ಲವಂತೆ. 


ಹಾಲು ಒಸರುವುದು ನಿಂತು, ಸ್ತನ ಒಣಗಿದನಂತರ ತುಂಗೆಯ

ಪ್ರತಿಕೃತಿಯನ್ನು ನಾಗ ಮಹಾಸತಿಯ ಕಟ್ಟೆಯ ಬದಿಯಲ್ಲೇ ನೆಲದಲ್ಲಿರಿಸಿ,

ಮಣ್ಣು ಮುಚ್ಚಿದ ಕಮ್ಮತಗೇರಿಯಜನ ಅಲ್ಲಿ ಏಕಸ್ತನಿ ದೇವಿಯ

ಪ್ರತಿಷ್ಠಾಪನೆ ಮಾಡಿ, ನೂರಾರು ವರುಷಗಳ ನಂತರವೂ 

ಪೂಜಿಸುತ್ತಿದ್ದಾರಂತೆ. 


(ತುಂಗೆಯ ಮೂರ್ತಿಯಿದ್ದ ಸ್ಥಳದಿಂದ ಅನತಿ ದೂರದಲ್ಲೇ ಒಂದು

ಪೊದೆಯ ಬಳಿ ತಾನು ರಕ್ತದ ಕಲೆಗಳನ್ನು ಕಂಡೆನೆಂದು

ನಂತರದಲ್ಲಿ ಬೊಮ್ಮಾಬೋವಿ ಯಾರಿಗೋ ಹೇಳಿದನಂತೆ.

ಆದರೆ ಕೇರಿಯ ಜನರು ಯಾರಿಗೂ ಸಿಂಗಾನಾಯಕನ ಮಗುವಿಗೆ

ಹಾಲೂಡಿಸಿದ ಸ್ತನದ ಬಗ್ಗೆ ಹೆಚ್ಚಿನ ಪುರಾವೆ ಬೇಕಿರಲಿಲ್ಲ)